ವಚನ ಚಳುವಳಿ ನಿಜಕ್ಕೂ ಈ ನಾಡಿನ ಮಹೋನ್ನತ ಹೆಜ್ಜೆಯಾಗಿದೆ. ನಾಡಿನಲ್ಲಿ ಸಮಾನತೆ ತಂದು ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ ಮಹಾ ಚಳುವಳಿ. ಈ ಚಳುವಳಿ ಜೀವ ಪಡೆದು ಒಂಬತ್ತು ಶತಮಾನಗಳಿಗೂ ಹೆಚ್ಚು ಸಮಯವಾದರೂ, ಅವು ಪ್ರಸಕ್ತ ಸನ್ನಿವೇಶಕ್ಕೆ ಸಮಕಾಲೀನ ಸವಾಲುಗಳಿಗೆ ಸಿದ್ಧವಿದ್ದಂತೆ, ಅತ್ಯುತ್ತಮ ಚಿಕಿತ್ಸೆಯಂತೆ ಪ್ರಸ್ತುತವಾಗಿವೆ. ಅದಕ್ಕೆ ಶರಣರು ಹೇಳಿದ್ದು "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂದು. ಸರ್ವಕಾಲಿಕ ಸತ್ಯದ ಮೌಲ್ಯಗಳಾಗಿ ಸಮಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳಾಗಿವೆ. ಕೋಟಿ ಕೋಟಿ ಜನರ ಬದುಕಾಗಿವೆ. ಜಾತಿ ಭೇದ ಪದ್ಧತಿಗಳು ತಾಂಡವವಾಡಿ ಭಾರತವನ್ನು ವಿನಾಶದತ್ತ ಉಪಕ್ರಮಿಸುತ್ತಿದ್ದ ಕ್ಲಿಷ್ಟ ಸನ್ನಿವೇಶದಲ್ಲಿ ಭಾರತೀಯ ಸಮಾಜಕ್ಕೆ ಹೊಸ ಸಮರ್ಥ, ದಿಗ್ದರ್ಶಕ, ಬಲಾಢ್ಯ, ಚಿಂತಕ, ದಾರ್ಶನಿಕ ಮಾರ್ಗದರ್ಶಕದ ಅನಿವಾರ್ಯತೆಯನ್ನು ಸೃಷ್ಟಿಸಿದ್ದ ಸಂಕಷ್ಟ ಸಮಯದಲ್ಲುದಯಿಸಿದ ಬೆಳಕುಗಳು ಈ ವಚನಗಳು. ವಚನ ಸಾಹಿತ್ಯ ಕನ್ನಡ ಸಾರಸ್ವತ ಲೋಕಕ್ಕೆ, ನಾಡಿಗೆ ಅನುಪಮ ಕೊಡುಗೆಗಳಾಗಿವೆ. ಈ ವಚನ ಸಾಹಿತ್ಯ ಮಾನವನ ಅತೀರೇಕದ ದುರಾಸೆಗಳಿಂದ ಸಮಾಜದಲ್ಲಿ ಅನೇಕ ಸಮಸ್ಯೆಗಳು ಅವಘಡಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಆತನಲ್ಲಿರುವ ದುರಾಸೆಯೂ ಒಂದು ಕಾರಣ. ಇದನ್ನರಿತ ವಚನಕಾರರಾದ ನೂಲಿಯ ಚಂದಯ್ಯನವರು ಹೇಳುತ್ತಾರೆ: “ಗುರುವಾದರೂ ಕಾಯಕದಿಂದಲೇ ಜೀವನಮುಕ್ತಿ ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕರುಹು ಹರಿಯುವುದು ಜಂಗಮನಾದರೂ ಕಾಯದಿಂದಲೇ ತನ್ನ ವೇಷದ ಪಾಶ ಹರಿಯುವುದು ಗುರುವಾದರೂ ಚರ ಸೇವೆಯ ಮಾಡಬೇಕು ಇದು ಚಂದೇಶ್ವರ ಲಿಂಗದರಿವು ಕೇಳಾ ಪ್ರಭು” ಅಂದರೆ ನೂಲಿಯ ಚಂದಯ್ಯನವರು ‘ಗುರು’, ‘ಲಿಂಗ’, ‘ಜಂಗಮ’ ಪೂಜ್ಯ ವಸ್ತುಗಳೆಂದು ನಾವು ತಿಳಿದುಕೊಂಡಾಗ ಗುರುವಿನ ಕರ್ತವ್ಯ, ‘ಲಿಂಗ’ದ ಕರ್ತವ್ಯ, ‘ಜಂಗಮ’ದ ಕರ್ತವ್ಯಗಳನ್ನು ಮನಮುಟ್ಟುವಂತೆ, ಹೃದಯಕ್ಕೆ ತಟ್ಟುವಂತೆ ನಿರ್ಣಯಿಸಿ, ಹೇಳುತ್ತಾರೆ. ಕೇವಲ ಸೇವೆಯನ್ನು ಅಪೇಕ್ಷಿಸುವ ಈ ‘ಗುರು’, ‘ಲಿಂಗ’, ‘ಜಂಗಮ’ರಿಗೆ ಕಾಯಕದ ಮಹತ್ವವನ್ನು ಈ ಶರಣ ಧರ್ಮ ವಿಧಿಸುತ್ತದೆ. ಆ ಕಾಯಕಗಳು ಯಾವುವು? ನಾವು ಒಂದೊಂದಾಗಿ ತಿಳಿದುಕೊಳ್ಳಬಹುದು. ‘ಗುರು’ ತನ್ನಲ್ಲಿರುವ ಅರಿವನ್ನು ಜಾಗೃತಗೊಳಿಸಿ ಕ್ರಿಯೆಯಲ್ಲಿ ತೊಡಗಿಸಿ, ಆ ಕ್ರಿಯೆಯಲ್ಲಿ ತಾನು ಅನುಭವಿಸಿದ ಆನಂದವನ್ನು ತನ್ನನ್ನು ನಂಬಿದ ಸಮಾಜಕ್ಕೆ ‘ಅರ್ಪಿಸಿ’ ತನ್ನಂತೆ ಮಾಡಿಕೊಳ್ಳುವುದು ಗುರುವಿನ ‘ಕಾಯಕ’. ಲಿಂಗವು ‘ಸತ್’ ಚೇತನದಾಯಕ ಅಲೆಗಳನ್ನು ಮೈಗೂಡಿಸಿಕೊಂಡು ಪೂಜೆಯಲ್ಲಿ ಬರುವ ಕ್ರಿಯೆಗಳಿಂದ ಭಕ್ತನ ಅರ್ಚನೆ, ಅನುಸಂಧಾನ, ಲಿಂಗಧಾರಣೆ, ಮೂಲಕ ಲಿಂಗಾಂಗ ಸಾಮರಸ್ಯದ ಬೆಳಕು ಕಾಣಬೇಕು. ನಿಜವಾದ ಜ್ಞಾನೇಂದ್ರಿಯಗಳ ಮೂಲಕ ಆನಂದ ಪಡೆಯುವುದೇ ‘ಲಿಂಗ’ದ ಕಾಯಕವಾಗುವಂತೆ, ಈ ಶೂನ್ಯ ಚೈತನ್ಯವು ‘ಸತ್’, ‘ಚಿತ್’, ‘ಆನಂದ’, ‘ನಿತ್ಯ’, ‘ಪರಿಪೂರ್ಣ’, ‘ಅಖಂಡ’ ಎಂಬ ಆರು ಲಕ್ಷಣಗಳನ್ನು ಹೊಂದಿದೆ. ಈ ಚೈತನ್ಯದ ಆರು ಲಕ್ಷಣಗಳ ವಿಕಾಸಗಳನ್ನು ತನ್ನಲ್ಲಿ ಹೊಂದಿ ‘ಜಂಗಮ’ ಸ್ಥಿತಿಗೆ ಬಂದು ‘ಸತ್’ ರೂಪ ಗುರುವಾದರೆ, ‘ಲಿಂಗ’ವು ಚಿದ್ರೂಪ. ‘ಜಂಗಮ’ ಆನಂದ ರೂಪವಾಗುವುದು. ಮಾಯೆಯ ಸಂಪೂರ್ಣ ನಿವಾರಣೆಯು ಕೇವಲ ಬೋಧ ಮಂತ್ರಗಳಿಂದ ಸಾಧ್ಯವಾಗದೇ ಇರುವಾಗ, ಜಂಗಮವು ಅನುಭಾವದಿಂದ ಆಚರಿಸಿ ತೋರಿಸುವುದು ಇದೇ ಆಗಿದೆ. ಹೀಗೆ ‘ಅರ್ಚನೆ’, ‘ಅರ್ಪಣೆ’, ಅನುಭಾವಗಳು ಕಾಯಕದ ಉದಾತ್ತತೆಯಿಂದ ಅಳವಡಿಸಿಕೊಳ್ಳಬೇಕೆಂದು ನೂಲಿಯ ಚಂದಯ್ಯನವರ ಅಭಿಪ್ರಾಯ. “ಸತ್ಯಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ ಚಿತ್ತ ವಿಚಾಂದವಾಗದಿರಬೇಕು. ನೇಮದ ಕೂಲಿಯೆಂದ ದಿನದ ನಿತ್ಯನೇಮದಲ್ಲಿ ಸಂದಿರಬೇಕು. ನೇಮದ ಕೂಲಿಯ ಬಿಟ್ಟು, ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದರೆ, ತಾ ಮಾಡುವ ಸೇವೆ ನಷ್ಟವಯ್ಯ! ನಿನ್ನಾಸೆಯ ವೇಷದ ಪಾಶಕ್ಕೆ ನೀನೇ ಹೋಗು. ನನಗೆ ನನ್ನ ಜಂಗಮದ ಪ್ರಸಾದವಾದಾಗ ಚಂದೇಶ್ವರ ಲಿಂಗಕ್ಕೆ ಪ್ರಾಣವಯ್ಯ” ಸತ್ಯಶುದ್ಧ ಕಾಯಕದಿಂದ ಅಂದರೆ ಕ್ರಮವಿದ್ದಂತೆ ಒಂದು ಕಣ್ಣಿಗೆ ಒಂದು ಹಾಗ ಎಂಬ ಲೆಕ್ಕದಲ್ಲಿ ಮಾರಿಗೆ ಬರಬೇಕು, ಬಂದ ದ್ರವ್ಯದಲ್ಲಿ ಮನವಿಚಾಂದವಾಗದೇ ಇರಬೇಕು. ನೇಮಿಸಿದಷ್ಟೇ ಬೆಲೆ ತೆಗೆದುಕೊಳ್ಳಬೇಕು. ಆ ನೇಮದ ಕೂಲಿಯನ್ನು ಬಿಟ್ಟು ಹಣದಾಸೆಗೊಳಗಾಗಿ ಹೆಚ್ಚು ಹಣ ತೆಗೆದುಕೊಂಡರೆ ನಾವು ಮಾಡುವ ಸೇವೆಯೇ ವ್ಯರ್ಥ. ಹೀಗೆ ಚಂದಯ್ಯನವರು ತಮ್ಮ ಮಾತುಗಳ ಮೂಲಕ ಲಿಂಗದೇwವನಿಗೆ ಕಾಯಕದ ಮೂಲವನ್ನು ತಿಳಿಸುತ್ತಾ, (ಅನುಭವ ಮಂಟಪದಲ್ಲಿ ಚಂದಯ್ಯನವರ ಚರ್ಚೆ ಪ್ರಸಂಗ ಆಧಾರಿತ) “ಇರಲಿ ಈ ಹಣ ಯಾರು ಕೊಟ್ಟರೋ ಅವರನ್ನೇ ಹುಡುಕಿಕೊಂಡು ಹೋಗಿ ಈ ಹಣ ಅವರಿಗೆ ಕೊಟ್ಟು ನಮ್ಮ ಕಾಯಕಕ್ಕೆ ಸಿಗುವ ಒಂದು ‘ಹಾಗ’ ತಂದರೆ ಸಾಕು! ಇನ್ನೊಮ್ಮೆ ಹೀಗೆ ಮಾಡಬೇಡ. ಹೋಗು, ಬೇಗ ಬಾ ಜಂಗಮ ದಾಸೋಹಕ್ಕೆ ತಡವಾಯಿತು! ಎಚ್ಚರ!” ಎಂದು ಲಿಂಗಯ್ಯನವರಿಗೆ ತಿಳಿಸಿ ವಿವರಿಸಿದರು ಶರಣ ಚಂದಯ್ಯನವರು. ನಿರ್ವಾಹವಿಲ್ಲದೆ ಲಿಂಗದೇವ ಮತ್ತೆ ಬಸವಣ್ಣನವರ ಹತ್ತಿರ ಬಂದು “ನಮ್ಮ ಒಡೆಯ ಚಂದಯ್ಯನವರು ಇದಕ್ಕೆ ಒಪ್ಪಲಿಲ್ಲ. ನಿಮ್ಮ ಸಾವಿರ ಹೊನ್ನ ಹಿಂದು ಪಡೆದು ನನಗೆ ಒಂದೇ ‘ಹಾಗ’ ಕೊಟ್ಟರೆ ಸಾಕು!” ಎಂದು ಹೇಳಿ ಹಣ ಹಿಂದಿರುಗಿಸಿ ಮನೆಗೆ ಒಂದು ಹಾಗ ಮಾತ್ರ ಚಂದಯ್ಯನ ಕೈಯಲ್ಲಿ ಇಟ್ಟ. ಅಂದಿನ ಜಂಗಮ ದಾಸೋಹ ಎಂದಿನಂತೆಯೇ ನಡೆಯಿತು. ಲಿಂಗದೇವ ಮಾತ್ರ ಎಂದಿನಂತೆ ಲವಲವಿಕೆಯಿಂದ ಇರಲಿಲ್ಲ. ತನಗಾದ ಅಪಮಾನವನ್ನು ಸಹಿಸಿಕೊಳ್ಳದೆ ಮಡಿವಾಳ ಮಾಚಿದೇವರ ಹತ್ತಿರ ಬಂದು ಲಿಂಗದೇವ ಮತ್ತು ಚಂದಯ್ಯನವರ ನಡುವೆ ಘಟಿಸಿದ ಘಟನೆಯನ್ನು ವಿವರಿಸಿ, ದುಃಖ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ. ಇತ್ತ ಚಂದಯ್ಯನವರು ಸಹ ಅಸಮಾಧಾನಗೊಂಡು ತಮ್ಮೊಳಗೆ ತಾವೇ, “ನಮ್ಮ ಆಸೆಗೂ ಮಿತಿ ಇರಬೇಕು. ಸಂಪತ್ತಿಗೂ ಕಡಿತ ಹಾಕಬೇಕು. ಇಲ್ಲವಾದರೆ ‘ಭಕ್ತ’ ಮತ್ತು ‘ಭವಿ’ಗಳಲ್ಲಿ ಕಾಣುವ ಅಂತರವೇನಿದೆ?” ಎಂದು ತಿಳಿಸುತ್ತಾ, “ಕಾಯಕದ ಮೂಲ ಸತ್ವ ಕಾಸಿನಲ್ಲಿ ಕರಗಿ ಹೋಗಬಾರದು. ಅದು ಜಂಗಮ ದಾಸೋಹಕ್ಕೆ ಮೀಸಲಾಗಿರಬೇಕು” ಎಂದು ಮಾಚಿದೇವರಿಗೆ ವಿವರಿಸುತ್ತಾ ಹೇಳಿದರು. ಚಂದಯ್ಯನವರು, ಲಿಂಗದೇವ ತಪ್ಪು ಮಾಡಿದ್ದ! ತಪ್ಪು ಮಾಡಿದ್ದ! ಎಂದು ಒಂದೇ ಸಮನೆ ಕುದಿಯುತ್ತಾ ಹೀಗೆ ಹೇಳುತ್ತಾರೆ: “ಕಂಡು ಕುಂದಿಸಿ ಬಂಧಿಸಿ ನೋಯಿಸಿ ಕಂಡಕಂಡವರ ಬೇಡಿ ತಂದು, ಜಂಗಮಲಿಂಗಕ್ಕೆ ಮಾಡಿಹೆನೆಂಬ ದಂಡುಗದ ಮಾಳ್ಪಕ್ಕೆ ಲಿಂಗಕ್ಕೆ ನೈವೇದ್ಯ ಸಲ್ಲದು. ತನು ಕರಗಿ, ಮನ ಬಳಲಿ, ಬಂದ ತೆರನನ್ನರಿತು, ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ ದಾಸೋಹವ ಮಾಡುವದೇ ಮಾಳ್ಪ, ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದದ್ದು ಲಿಂಗಕ್ಕರ್ಪಿತವಲ್ಲದೆ, ದುರಾಸೆಯಿಂದ ಬಂದದ್ದು ಅನರ್ಪಿತ. ಇದು ಕಾರಣ ಸತ್ಯಶುದ್ಧ ಕಾಯಕದ ನಿತ್ಯದ್ರವ್ಯವಾದರೆ, ಚಂದೇಶ್ವರ ಲಿಂಗಕ್ಕೆ ನೈವೇದ್ಯ ಸಂದಿತು ಕೇಳಯ್ಯ.” ಬೇರೊಬ್ಬರನ್ನು ಕಂಡು ಕುಂದಿಸಿ ಬಂಧಿಸಿ ನೋಯಿಸಿ, ಕಂಡಕಂಡವರನ್ನು ಬೇಡಿ ತಂದು ಜಂಗಮಲಿಂಗಕ್ಕೆ ದಾಸೋಹ ಮಾಡಿದ ತೊಡಕು, ಅದು ಲಿಂಗಕ್ಕೆ ನೈವೇದ್ಯವಾಗಲಾರದು. ತನುವನ್ನು ದಂಡಿಸಿ, ಮನವನ್ನು ಬಳಲಿಸಿ ಭಾವನಿಷ್ಠವಾಗಿ ನಿಸ್ಸಂಶಯಿಯಾಗಿ ಲಿಂಗಕ್ಕೆ ಮಾಡುವುದೇ ಸರಿ. ಕಾಯಕದಿಂದ ಬಂದ ಕಾರೆಯ ಸೊಪ್ಪಾದರೂ ಲಿಂಗಕ್ಕೆ ಅರ್ಪಿತ; ದುರಾಸೆಯಿಂದ ಬಂದದ್ದು ಅನರ್ಪಿತ. ಆ ಕಾರಣ ಸತ್ಯಶುದ್ಧ ಕಾಯಕದ ಕ್ರಮಬದ್ಧ ದ್ರವ್ಯವಾದರೆ ಲಿಂಗಕ್ಕೆ ನೈವೇದ್ಯ ಎಂದು ತಿಳಿಸುತ್ತಾ ಚಂದಯ್ಯನವರು ಮಾಚಿದೇವರಿಗೆ (ಅನುಭವ ಮಂಟಪದಲ್ಲಿ ಚಂದಯ್ಯನವರ ಚರ್ಚೆ ಪ್ರಸಂಗ ಆಧಾರಿತ) “ನಾನು ನಿಮ್ಮ ಭರವಸೆಯಿಂದ ಲಿಂಗದೇವನನ್ನಿಟ್ಟುಕೊಂಡೆ” ಆದರೆ, ಲಿಂಗದೇವ ಹೇಳಿದಂತೆ ನಡೆದುಕೊಳ್ಳಲಿಲ್ಲ. ನಡೆಯುವುದು ಒಂದು ಮತ್ತು ನುಡಿಯುವುದು ಒಂದು ನನಗೆ ಸರಿ ಕಾಣುತ್ತಿಲ್ಲ. ಪ್ರಾರಂಭದಲ್ಲಿ ಈ ಲಿಂಗ ಗುರು ನೀಡಿದ ಆಕಾರ ಬಿಟ್ಟು ಗುರುದ್ರೋಹಿ ಯಾದ, ಭಕ್ತನ ಪೂಜೆ ಅಲ್ಲಗಳೆದ ಭಕ್ತದ್ರೋಹಿಯಾದ, ನೀರಿಗಿಲ್ಲದೆ ಜಂಗಮ ದ್ರೋಹಿಯಾದ. ಜಂಗಮ ದಾಸೋಹಕ್ಕೆ ಮಾಡುವ ಕಾಯಕದ ನಿಯಮ ಮೀರಿ ಅಕ್ಷಮ್ಯ ಅಪರಾಧ ಮಾಡಿದೆ. ತಾವು ನಮ್ಮಲ್ಲಿ ಹಿರಿಯ ಶರಣರು ತಮ್ಮ ಮಾತು ಮೀರಿದನೆಂದು ತಿಳಿಯಬೇಡಿ ಸಕಲ ಮರ್ಯಾದೆಯೊಂದಿಗೆ ಈ ಲಿಂಗದೇವನನ್ನು ಕಳುಹಿಸಿಬಿಡಿ” ಎಂದು ಭಿನ್ನವಿಸಿಕೊಂಡರು ಶರಣ ಚಂದಯ್ಯನವರು. ಈ ರೀತಿ ನೂಲಿಯ ಚಂದಯ್ಯನವರು ಶಿವಶರಣರು ತಮ್ಮ ಬದುಕಿನುದ್ದಕ್ಕೂ ದುರಾಸೆಯಿಂದ ದೂರ ಉಳಿದವರು. ಕಾಯಕದ ನಿಜ ಮೌಲ್ಯವನ್ನು ಆಚಾರಗೊಳಿಸಿದವರು. ಇಂದಿನ ಪರಿಸ್ಥಿತಿ ಗಮನಿಸಿದರೆ ಹನ್ನೆರಡನೇ ಶತಮಾನದ ಕಾಯಕ ಈ ಮೌಲ್ಯ ವಾಸ್ತವಕ್ಕೆ ಅನಿವಾರ್ಯವಾಗಿದೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ತತ್ತ್ವಕ್ಕೆ ಪ್ರೇರಕವಾಗಿವೆ. ಆಕರ ಗ್ರಂಥಗಳು/ಟಿಪ್ಪಣಿ: ನೂಲಿಯ ಚಂದಯ್ಯ - ಜೆ.ಕೆ. ರಾಮೇಶ್ವರ, ಪುಟ ಸಂಖ್ಯೆ : 28-41 ಸಮಕಾಲೀನ ಶಿವಶರಣರು - ಬಸವ ಸಮಿತಿ ಬೆಂಗಳೂರು, ಪುಟ ಸಂಖ್ಯೆ : 120, 127, 128. ನೂಲಿಯ ಚಂದಯ್ಯ - ಡಾ. ವಿ. ಜಿ. ಪೂಜಾರಿ, ಶ್ರೀ ಗಳಾ ಗಳಪ್ಪ ಪಾಟೀಲ ಬಸವಾದಿ ಶರಣ ಸಾಹಿತ್ಯ ಕೇಂದ್ರ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಪುಟ ಸಂಖ್ಯೆ 15,16,17,18 ಸಿದ್ಧಲಿಂಗೇಶ್ವರ ಮಠ ಅವದಾನ ಕಲ್ಲುಮಠದ ಅಧಿಪತಿಗಳು. ಪುಟ ಸಂಖ್ಯೆ, 230,251 ‘ಶೂನ್ಯ ಸಂಪಾದನೆ ಅನುಸಂಧಾನ’ ಜಯಾ ರಾಜಶೇಖರ ನೂಲಿಯ ಚಂದಯ್ಯ - ಪ್ರೊ. ಎಲ್ಲಪ್ಪ ಭೂತಯ್ಯ, ಪ್ರಕಾಶಕರು ಗು. ರಾ. ಸುರೇಶ ಮಧುಕುಂಜ ಜೆ. ಸಿ. ರಸ್ತೆ, ಹುಬ್ಬಳ್ಳಿ. ಪುಟ ಸಂಖ್ಯೆ, 25, 26, 27.
Building similarity graph...
Analyzing shared references across papers
Loading...
ನಾಗರಾಜ ದಂಡೋತಿ
Building similarity graph...
Analyzing shared references across papers
Loading...
ನಾಗರಾಜ ದಂಡೋತಿ (Fri,) studied this question.
www.synapsesocial.com/papers/6a0ff496d674f7c03778db5c — DOI: https://doi.org/10.5281/zenodo.20312778