ಮೇ 30 2025 ಕನ್ನಡ ಸಾಹಿತ್ಯದ ಘಮಲನ್ನು, ಸೊಗಸನು, ಸತ್ವವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿ ಅದರ ಘನತೆಯನ್ನು ಹೆಚ್ಚಿಸಿದ ಅವಿಸ್ಮರಣೀಯ ದಿನ. 70 ರ ದಶಕದಲ್ಲಿ ಮುನ್ನೆಲೆಗೆ ಬಂದ ಬಂಡಾಯ ಸಾಹಿತ್ಯದ ಗಟ್ಟಿ ಬರಹಗಾರ್ತಿ ಬಾನುಮುಸ್ತಾಕ ಅವರ ಎದೆಯ ಹಣತೆ ಕೃತಿಯ ಆಂಗ್ಲ ಅನುವಾದ “ಊಜಚಿಡಿಣ ಐಚಿಟಠಿ” ಕೃತಿಗೆ ಅಂತರ ರಾಷ್ಟ್ರೀಯ ಬೂಕರ ಪ್ರಶಸ್ತಿ ಬಂದಿದೆ. ಕನ್ನಡಿಗರ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ಬಾನು ಮುಷ್ತಾಕ್ ಅವರು ಎದೆಯ ಹಣತೆಯ ಕಥೆಗಳು ಹೆಣ್ಣಿನ ಭಾವ-ಭಿವ್ಯಕ್ತಿಗಳನ್ನು ಮನಕಲುಕುವಂತೆ ಮಾತಾಡುತ್ತವೆ. ಪೊಳ್ಳು ಅರ್ಥ ರಹಿತ, ಅವೈಜ್ಞಾನಿಕ ಮೂಸೆಯಲ್ಲಿ ನಾರುತ್ತಿರುವ ಹೆಣ್ಣಿನ ಪರಿಸ್ಥಿತಿಯನ್ನು ಅವಾವರಣಗೊಳಿಸುತ್ತವೆ. ಬಾನು ಮುಷ್ತಾಕ್ ಕಥೆಗಾರ್ತಿ, ಬಂಡಾಯ ಬರಹಗಾರ್ತಿ, ವೃತ್ತಿಯಿಂದ ವಕೀಲೆಯಾಗಿ ಪ್ರವೃತ್ತಿಯಿಂದ ಸಾಹಿತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾರಂಭದಲ್ಲಿ ಲಂಕೇಶ ಪತ್ರಿಕೆಗೆ ಲೇಖನವೊಂದನ್ನು ಪ್ರಕಟಿಸಲು ಕಳುಹಿಸಿದ್ದರು. ಅವರ ಬರವಣಿಗೆಯನ್ನು ಮೆಚ್ಚಿ ಪ್ರಧಾನ ಸಂಪಾದಕರಾದ ಪಿ.ಲಂಕೇಶ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ತಮ್ಮ ಪತ್ರಿಕೆಗಾಗಿ ಬರೆಯಲು ಆಹ್ವಾನವನ್ನು ನೀಡಿದರು. ಅಲ್ಲಿಂದ 1981 ರಿಂದ 1990 ರವರೆಗೆ ಲಂಕೇಶ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದರು. 1978ರ ಸಂದರ್ಭದ ಬಂಡಾಯ ಸಾಹಿತ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಬಂಡಾಯದ ಪ್ರಕರ ಕಿಡಿ ಪ್ರೋ. ಬರಗೂರ ರಾಮಚಂದ್ರಪ್ಪರ ಮಾರ್ಗದರ್ಶನದಲ್ಲಿ ಬಂಡಾಯ ಕಮ್ಮಟಗಳನ್ನು ಆಯೋಜಿಸುತ್ತಾ ಅನ್ಯಾಯ, ಅಸಮಾನತೆಯ ವಿರುದ್ಧ ದನಿ ಎತ್ತುವ ಬಂಡಾಯ ಸಾಹಿತ್ಯದ ಆಶಯದಂತೆ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಮುಂದುವರೆಯುತ್ತಾರೆ. ಬಾನು ಮುಷ್ತಾಕ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಮುಸ್ಲಿಂ ಸಮುದಾಯ ಎಂದರೆ ಎಲ್ಲರಿಗೂ ತಿಳಿದಿತು. ಈ ಧರ್ಮದಲ್ಲಿ ಕುನಾನ್ ಶರಿಯತ್ನ ನಿರ್ಬಂಧಕಗಳು, ಕಟ್ಟುಪಾಡುಗಳು, ಕಾನೂನುಗಳು ಇದ್ದು ಅದರ ಅಣತಿಯಲ್ಲೆ ಎಲ್ಲವು ನಡೆಯುವುದು. ಇನ್ನೂ ಮಹಿಳೆಯರ ಮೇಲಂತೂ ಅನೇಕ ಬಗೆಯ ನಿಯಂತ್ರಣಗಳನ್ನು ಹೇರಿರಲಾಗುತ್ತದೆ. ಅವುಗಳ ಚೌಕಟ್ಟಿನಿಂದ ಹೋರಬರುವುದಂತೂ ಇಲ್ಲವೇ ಇಲ್ಲ. ಆ ಚೌಕಟ್ಟಿನಿಂದ ಇಣಕಿಯೂ ನೋಡುವ ಅವಕಾಶವಿಲ್ಲ. ಇಂತಹ ಅಮುಕ್ತವಾದ ಸಮುದಾಯದಿಂದ ಬರುವ ಒಂದು ಜಾಗರತ ಪ್ರಜ್ಞೆ ಎಂದರೆ ನಮ್ಮ ಬಾನು ಮುಷ್ತಾಕರು. ಅವರ ಪ್ರತಿ ಕಥೆಗಳಲ್ಲಿ ಸ್ತ್ರೀ ಸಂವೇದನೆಗಳು ಕಾಣುತ್ತವೆ. ಧಾರ್ಮಿಕ ಪಟ್ಟ ಭದ್ರಹಿತಾಸಕ್ತಿಗಳಿಂದ ಹೆಣ್ಣು ಮಕ್ಕಳು ಅನುಭವಿಸುವ ನೋವನ್ನು ಸಂವೇದನೆಗಳನ್ನು ಬಹಳ ಮುಕ್ತವಾಗಿ ತಮ್ಮ ಕಥೆಗಳಲ್ಲಿ ಹೇಳಿಕೊಂಡಿದ್ದಾರೆ. ಅವರ ಹಸೀನಾ ಮತ್ತು ಇತರ ಕಥೆಗಳು ಕೃತಿಯಲ್ಲಿ ಒಟ್ಟು ನಲವತ್ತೇಳು ಕಥೆಗಳಿವೆ. ಒಟ್ಟು ಆರು ಕಥಾ ಸಂಕಲನಗಳ ಸಂಗ್ರಹವೇ ಈ ಕೃತಿಯಾಗಿದೆ. ಹೆಜ್ಜೆ ಮಾಡಿದ ಹಾದಿ, ಬೆಂಕಿಮಳೆ, ಎದೆಯ ಹಣತೆ, ಸಪಿರಾ, ಬಡವರ ಮಗಳು ಹೆಣ್ಣಲ್ಲ, ಹೆಣ್ಣು ಹದ್ದಿಯ ಸ್ವಯಂವರ ಹೀಗೆ ಆರು ಕಥಾ ಸಂಕಲನಗಳ ಒಂದು ಹೂಗುಚ್ಛವಾಗಿದೆ. ಬೂಕರ ಪ್ರಶಸ್ತಿ ಪಡೆದ ಎದೆಯ ಹಣತೆ ಕಥಾ ಸಂಕಲನದಲ್ಲಿ ಇವರ ಆಯ್ದು ಹನ್ನೆರಡು ಕಥೆಗಳನ್ನು ಸೇರಿಸಿ ಆಂಗ್ಲಾನುವಾದ ಭಾವಾನುವಾದ ಮಾಡಿ ಹಾರ್ಚಲ್ಯಾಂಪ್ ಎಂದು ಹೆಸರಿಟ್ಟು ಕನ್ನಡ ಅನುವಾದಕಿದೀಪಾ ಭಾಸ್ತಿ ಅನುವಾದ ಮಾಡಿರುತ್ತಾರೆ. ಹಸೀನಾ ಮತ್ತು ಇತರ ಕಥೆಗಳು ಕೃತಿಯ ಶೀರ್ಷಿಕೆಯ ಹಸೀನಾ ಎಂಬ ಹೆಸರಿನ ಹೆಣ್ಣುಮಗಳು ಬಾನು ಮುಷ್ತಾಕರ ಪ್ರಸಿದ್ಧವಾದ “ಕರಿನಾಗರಗಳು” ಕಥೆಯಲ್ಲಿ ಬರುವ ಅಸಾಯಕ ಮಹಿಳೆ ಹಸೀನಾಳ ಗಂಡ ಯಾಕೂಬಾ ಮೂರು ಹೆಣ್ಣು ಮಕ್ಕಳು ಮೊದಲ ಮಗಳು ಹುಟ್ಟುಗುರುಡಿ ಇನ್ನೂ ಎರಡು ಚಿಕ್ಕ ಹೆಣ್ಣುಮಕ್ಕಳು, ಹೀಗಿದ್ದು ಮತ್ತೆ ಮೂರು ತಿಂಗಳ ಬಸುರಿ ಯಾಕೂಬನಿಗೆ ನಾಲ್ಕನೆಯದಾದರೂ ಗಂಡು ಮಗು ಆದಿತು ಎಂಬ ಆಶೆ, ತನ್ನ ಆಟೋರಿಕ್ಷಾಗೆ ಒಬ್ಬ ವಾರಸ್ಸುದಾರ ಬರುತ್ತಾನೆಂದು ಒಳಗೊಳಗೆ ಸಂತೋಷಪಡುತ್ತಾನೆ. ಆದರೂ ಒಮ್ಮೆ ವೈದ್ಯರಿಂದ ಪರೀಕ್ಷಿಸಬೇಕೆಂದು ಆಲೋಚಿಸಿ ಗುಟ್ಟಾಗಿ ಭ್ರೂಣ ಪರೀಕ್ಷೆ ಮಾಡಿಸುತ್ತಾನೆ. ಅದು ಸಹ ಹೆಣ್ಣೊಂದು ತಿಳಿದು ಹತಾಶನಾಗಿ ಹಸೀನಾ ಮೇಲೆ ರೇಗಾಡುತ್ತಾನೆ. ಗರ್ಭದಲ್ಲಿ ಮಗು ಗಂಡೋ-ಹೆಣ್ಣೋ ಎಂದು ನಿರ್ಧರಿತವಾಗುವುದ ವರ್ಣತಂತುಗಳಿಂದ (ಕ್ರೋಮೊಜೋನ್) ಎಂಬುದನ್ನು ತಿಳಿಯದ ಅವಿವೇಕಿ ಯಾಕೂಬ್ ಇದಕ್ಕೆಲ್ಲ ಹಸೀನಾಳೆ ಕಾರಣ ಎಂದು ಭಾವಿಸಿ ಮನೆಯನ್ನು ಬಿಟ್ಟು ಹೋಗಿ ಮತ್ತೊಂದು ಮದುವೆಯಾಗಲು ತೀರ್ಮಾನಿಸುತ್ತಾರೆ. ನ್ಯಾಯಕ್ಕಾಗಿ, ಜೀವಾಂಶಕ್ಕಾಗಿ ಮೌಲ್ವಿಯಲ್ಲಿ, ಮುತುವಲ್ಲಿ ಸಾಹೇಬರ ಬಳಿ ಹೋದರೂ ನ್ಯಾಯ ಸಿಗದು, ಏನೆ ಪ್ರಮಾದಗಳಾದರೂ ಅದಕ್ಕೆ ಹೆಣ್ಣೇ ಕಾರಣ ಎಂಬ ಪುರುಷ ಪ್ರಧಾನ ಸಮಾಜದ ರಾಯಭಾರಿಯಂತೆ ಯಾಕೂಬಾ ವರ್ತಿಸುತ್ತಾನೆ. ನ್ಯಾಯ ಸಿಗದೇ ಇದ್ದಾಗ ವ್ಯವಸ್ಥೆಯ ವಿರುದ್ಧ ಪ್ರತಿಭಟಿüಸುತ್ತಾಳೆ. ತನ್ನ ಹಾಗೂ ತನ್ನ ಕರುಳ ಕಂದಮ್ಮಗಳ ಮುಂದಿನ ಭವಿಷ್ಯವನ್ನು ನೆನೆದು ಮರುಕುತ್ತಾಳೆ. ಎಷ್ಟೇ ಬೇಡಿದರೂ ಮೌಲ್ವಿಯಿಂದ ಯಾಕೂಬನಿಂದ ಪರಿಹಾರ ಕೊಡಿಸುವಲ್ಲಿ ವಿಫಲರಾಗುತ್ತಾರೆ. ಆಗ ಹಸೀನಾ ಬಂಡಾಯವೇಳುತ್ತಾಳೆ ಅಲ್ಲಿಗೆ ಬಂದ ಯಾಕೂಬಾ ಅವಳನ್ನು ಮನಬಂದಂತೆ ಹೊಡೆಯುತ್ತಾನೆ. ಸುತ್ತುವರೆದು ನೆರೆದಿದ್ದ ಜನರೆಲ್ಲ ಬಾಯಿ ಇರದ ಮೂಕರಂತೆ ನೋಡಿ ತಮ್ಮ ತಮ್ಮ ಮನೆಗೆ ಮರಳುತ್ತಾರೆ. ಹಸೀನಾ ಮತ್ತು ಆಕೆಯ ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ಅಲ್ಲಾನೂ ವಿಫಲನಾಗುತ್ತಾನೆ. ಪುರುಷನ ಕ್ರೌರ್ಯಕ್ಕೆ ಬಲಿಯಾದ ಹಸೀನಾ ಸ್ಥಿತಿಯನ್ನು ಲೇಖಕಿ ಕರಳು ಹಿಡುವಂತೆ ವರ್ಣಿಸಿದ್ದಾರೆ. ಬದುಕಿನಲ್ಲಾಗಲಿ, ಸಂಸಾರದಲ್ಲಾಗಲಿ ಏನೇ ಅವಘಡಗಳು ಸಂಭವಿಸಿದರೆ ಅದಕ್ಕೆ ಹೆಣ್ಣು ಕಾರಣಗಳು ಏನೇ ಒಳ್ಳೆಯದು ನಡೆದರೆ ಅದು ಪುರುಷನಿಂದಲೇ ಎಂಬ ಲಿಂಗತಾರತಮ್ಯದ ಧೋರಣೆಯನ್ನು ಕಥೆಯೂದ್ದಕ್ಕೂ ಲೇಖಕಿ ವಿರೋಧಿಸುತ್ತಾರೆ. ನಾಲ್ಕು ಗೋಡೆಗಳ ಕತ್ತಲೆಯ ಪ್ರಪಂಚದ ಮಧ್ಯೆ ಬದುಕುವ ಹಸೀನಾಳಂತ ಅದೇಷ್ಟು ಮಹಿಳೆಯರು ಪುರುಷರ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ. ಅವನಿಂದ ರೂಪಿತವಾದ ಸ್ಥಾಪಿತ ಧೋರಣೆಗಳನ್ನು ಅತ್ತ ಮನ್ನಿಸಲು ಆಗದೆ ಇತ್ತ ವಿರೋಧಿಸಲು ಆಗದ ತ್ರಿಶಂಕು ಸ್ಥಿತಿಯಲ್ಲಿ ಅಸಹಾಯಕಳಾಗಿ ಬದುಕುತ್ತಿದ್ದಾರೆ. ಕಥೆಗಾರ್ತಿ ಬಾನು ಮುಷ್ತಾಕರು ತಮ್ಮ ಪ್ರತಿ ಕಥೆಯ ಮಹಿಳಾ ಪಾತ್ರದಾರಿಗಳ ಮೂಲಕ ಸಮುದಾಯದ ಅವೈಜ್ಞಾನಿಕ ಹಾಗೂ ಅಮಾನವೀಯ ಮೌಲ್ಯಗಳ ವಿರುದ್ಧ ಬಂಡಾಯವೆದಿದ್ದಾರೆ. ಮಗಳನ್ನು ಕಳೆದುಕೊಂಡ ಹಸೀನಾ ಅಘಾತಕ್ಕೊಳಗಾಗಿ ಸಮುದಾಯದ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾಳೆ. ಅವಳ ಈ ದಿಟ್ಟ ಹೆಜ್ಜೆ ಮುಸ್ಲಿಂ ಸಮುದಾಯದ ಇತರ ಮಹಿಳೆಯರ ಚೇತನ ಜಾಗೃತವಾಗುತ್ತದೆ. ಅರಿವಿನ ಒಳಗಣ್ಣು ತೆರೆಯುತ್ತದೆ. ಬಾನು ಮುಷ್ತಾಕರ ಪ್ರತಿ ಕಥೆಯ ನಾಯಕಿಯರು ತಮ್ಮ ಮೇಲಿನ ಅವೈಜ್ಞಾನಿಕ ಆರೋಪಗಳಿಗೆ ಸಾಕ್ಷಿಗಳನ್ನು ಹೇಳುವ ಅರ್ಥರಹಿತ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಅನ್ಯಾಯಗಳಿಗೆ ನ್ಯಾಯವನ್ನು ಕೇಳುವ ಛಲಗಾರ್ತಿಯರನ್ನಾಗಿ ಬಿಂಬಿಸಿದ್ದಾರೆ. ಕೆಲವೊಂದು ಕಥೆಗಳಲ್ಲಿ ಕೈಲಾಗದ ಅಸಾಹಯಕ ಸ್ಥಿತಿಯಲ್ಲಿ ತೊಳಲಾಡುವ ಬಲಿಪಶುಗಳಂತೆ ಕಾಣಸಿಗುತ್ತಾರೆ. ಒಮ್ಮೆ ಹೆಣ್ಣಾಗು ಕಥೆಯಲ್ಲಿ ವರದಕ್ಷಣೆಯ ಹೆಸರಿನಲ್ಲಿ ತವರಿನಲ್ಲಿಯೇ ತೀರುವ ಬದುಕು. ನಿರಾಶೆ, ಹತಾಶೆ, ವಿಲಕ್ಷಣ ಮನಸ್ಥಿತಿಯಲ್ಲಿ ದೇವರಿಗೆ ಅರಿವಿಲ್ಲದ ಕುಂಬಾರನಂತೆ ಸೃಷ್ಠಿ ಮಾಡುತ್ತಿಯಲ್ಲಾ ಒಮ್ಮೆ ಹೆಣ್ಣಾಗಿ ಹುಟ್ಟಿ ನೋಡು ನಿನಗೆ ಆವಾಗಲಾದರು ಹೆಣ್ಣಿನ ಸ್ಥಿತಿ ತಿಳಿದಿತು ಎಂದು ಸವಾಲು ಕೇಳುವಲ್ಲಿ ಅವಳ ಎದೆಗಾರಿಕೆ ಮತ್ತೊಮ್ಮೆ ಸಿನಿಕತನ ಎನಿಸುತ್ತದೆ. ಎದೆಯ ಹಣತೆಯ ಕಥೆಯಲ್ಲಿನ ಮೆಹರ ಪಾತ್ರನು ಹಾಗೆಯೇ ಇದೆ, ಗಂಡನನ್ನು ಬಿಟ್ಟು ತವರಿಗೆ ಬಂದರೆ ಪಂಚಮಹಾಪಾಪ ಮಾಡಿದಂತೆ ಎಂದು ಹೇಳುವ ತವರವರೂ ಗಂಡ ಹಾದರ ಮಾಡಿದರೂ ಅದು ಅವನ ಹಕ್ಕು ಅವನ ಪುರುಷಾರ್ಥ ಎಂದು ಹೇಳುವ ಸಮಾಜ ಇವೆಲ್ಲದರ ಬಗ್ಗೆ ಬಾನು ಮುಷ್ತಾಕ ಮಾತಾಡುತ್ತಾ ಹೋಗುತ್ತಾರೆ. ಗಂಡ ಏನು ಮಾಡಿದರು ನಡೆಯುತ್ತೇ ಅವನ ಗಂಡಸು, ಹೆಂಡತಿಯಾದವಳು ಅದನ್ನು ಸಹಿಸಿಕೊಳ್ಳಬೇಕು ಅದೇ ಧರ್ಮ ಎಂದು ಹೇಳುವ ಅಂಧ ಸಮಾಜ ಇವೆಲ್ಲವನ್ನು ಕಥೆಯಲ್ಲಿ ಮನಕಲಕುವಂತೆ ಕಟ್ಟಿಕೊಟ್ಟಿದ್ದಾರೆ. ತವರು ಮನೆಯವರ ಕೊಂಕ ಮಾತುಗಳು ಸಮಾಜದ ಟೀಕೆಗಳಿಂದ ಬೆಸತ್ತು ಆತ್ಮಹತ್ಯೆ ಮಾಡಿಕೊಳ್ಳುವಾಗ ಹಿರಿ ಮಗಳು ಸಲ್ಮಾ ತಾಯಿಯಂತೆ-ಗೆಳತಿಯಂತೆ ಬಂದು “ಅಮ್ಮಿ ಅಬ್ಬಾಗೋಸ್ಕರ ಸಾಯುತ್ತಿದ್ದಿಯಲ್ಲಾ ಸರಿಯೇನು? ನಮಗೋಸ್ಕರ ಬದುಕುವುದಿಲ್ಲವಾ ನಮ್ಮನ್ನು ಹೀಗೆ ತಬ್ಬಲಿಗಳಾಗಿ ಮಾಡಲು ಸಾಧ್ಯನಾ ಅಮ್ಮಿ... ನಮಗೆ ನೀನು ಬೇಕು” ಎಂದು ತಾಯಿಯ ಪಾದದ ಮೇಲೆ ಬಿದ್ದು ಅವಳು ಆ ಹಿರಿ ಮಗಳು ಸಲ್ಮಾನನ್ನು, ಹಸೂಗೂಸನ್ನು ಎದೆಗಪ್ಪಿಕೊಂಡು ಬದುಕುವುದಾಗಿ ಹೇಳುತ್ತಾಳೆ ಎದೆಯೆತ್ತರಕ್ಕೆ ಬೆಳೆದ ಮಗಳು ಗೆಳತಿಯೊಬ್ಬಳ ಹಾಗೆ ಹೇಳುವ ಸಾಂತ್ವನದ ಸ್ವರ, ಸಮಾಧಾನ ಮಾಡುವ ಸಮಭಾವ ಇವೆಲ್ಲ ನೋಡಿ ಮೆಹರಳಿಗೆ ವಾಸ್ತವನ ಅರಿವು ಬಂದು ಕ್ಷಮಿಸು ಕಂದಾ ಎಂದು ಹೇಳುತ್ತಾಳೆ. ಆಗ ಕತ್ತಲು ಹರಿಯುತ್ತಿತ್ತು. ಎದೆಯ ಹಣತೆಯ ಬೆಳಕು ಮಂದವಾಗಿ ಪ್ರಕಾಶಿಸುತ್ತದೆ. ಅದು ಓದುಗರ ಮೈ-ಮನಸ್ಸನ್ನು ರೋಮಾಂಚನಗೊಳಿಸುತ್ತದೆ. ಬಾನು ಅವರ ಪ್ರತಿ ಕಥೆಗಳು ಸಮಾಜಿಕ ದೃಷ್ಠಿಕೋನ ಬದಲಾವಣೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳ ಧಾರ್ಮಿಕ ನೇತಾರರು ಬದಲಾವಣೆಯ ದೃಷ್ಟಿಕೋನಕ್ಕೆ ತಡೆ ಒಡ್ಡುತ್ತಾರೆ. ಆದರೆ ಸಾಹಿತ್ಯ ಮತ್ತು ಬರವಣಿಗೆಗೆ ಸಮಾಜದ ವಿಚಾರಧಾರೆಗಳನ್ನು ಬದಲಾಯಿಸುವ ಶಕ್ತಿ ಇದೆ. ಹಳೆ ನೀರು ಹೋಗಿ ಹೊಸ ನೀರು ಬರಬೇಕು. ವಿಚಾರಗಳು ಹರಿಯುವ ನೀರಾಗಿದ್ದರೆ ಮಾತ್ರ ತಿಳಿಯಾಗಿರುತ್ತವೆ. ಜೀವ ಸೌಖ್ಯಕ್ಕೆ ಪೂಕರವಾಗಿರುತ್ತವೆ. ಇಲ್ಲವಾದರೆ ನಿಂತನೀರಾಗಿ ಸಮಾಜ ಗಬ್ಬಿದ್ದು ಅದರ ಸ್ವಾಸ್ಧ ಹಾಳಾಗುತ್ತದೆ. ಸಮಾಜಮುಖಿ ಆಶಯಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟ ಲೇಖಕಿ ಬಾನು ಮುಷ್ತಾಕರು, ತಮ್ಮ ಸಮುದಾಯದ ಧಾರ್ಮಿಕ, ಸಾಮಾಜಿಕ ತಲ್ಲಣಗಳನ್ನು ಪರಿಶೀಲಿಸಿ ತಮ್ಮ ಕಥಾ ಬರಹಕ್ಕೆ ತಂದಿದ್ದಾರೆ. ವ್ಯವಸ್ಥೆಯವಿರುದ್ಧ ಮಾತನಾಡುವ, ಸಂವೇದನೆಗಳಿಗೆ ದನಿಯಾಗುವ ಕೆಲಸವನ್ನು ಕಥೆಗಳಲ್ಲಿ ಮಾಡಿದ್ದಾರೆ. ಆದರೆ ಹೆಣ್ಣಿಗೆ ಮಾತನಾಡದಂತೆ, ಬಾಯಿ ಇದ್ದರು ಮೂಕಿಯಂತೆ ಮಾಡುವ ಸಮಾಜದ ಹುನ್ನಾರಕ್ಕೆ ಸಾಮಾಜಿಕ ಗದರುವಿಕೆ ಎಂದು ಅವರು ಕರೆಯುತ್ತಾರೆ. ಇಂತರ ಗದರುವಿಕೆಗೆ ಬೆದರದೆ ಅವರ ಕಥೆಗಳು ಧೈರ್ಯವಾಗಿ ಮಾತಾಡುತ್ತವೆ. ಬರಹಗಾರರಿಗೆ ಸೈದ್ಧಾಂತಿಕ ಸ್ಪಷ್ಟತೆಯ ಅರಿವಿರಬೇಕು, ಅಂದಾಗ ಮಾತ್ರ ಸತ್ಯ ಪ್ರಜ್ವಲಿಸಲು ಸಾಧ್ಯವಾಗುತ್ತದೆ. ಬಾನು ಮುಷ್ತಾಕರು ಮುಸ್ಲಿಂ ಲೋಕವನ್ನು ಸಾಹಿತ್ಯದ ಮೂಲಕ ತೆರೆದಿಡುತ್ತಾರೆ. ಆ ಸಮುದಾಯದ ಮಹಿಳೆಯರ ಬದುಕಿನ ಕರಾಳ ವೃತ್ತಗಳನ್ನು ಎಳೆ-ಎಳೆಯಾಗಿ ಬಿಚ್ಚಿಡುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡಿದ್ದಾರೆ. ಅವರಲ್ಲಿನ ಮುಸ್ಲಿಂ ಸ್ತ್ರೀ ಸಂಕಟ ಮುಂದೆ ಸ್ತ್ರೀ ಸಂಕಟವಾಗಿ ಇಡಿ ಸ್ತ್ರೀ ಸಮೂಹದ ಸಂಕಟಗಳ ಪ್ರತಿನಿಧಿತ್ವವನ್ನು ವಹಿಸುತ್ತದೆ. ಪಿತೃ ಪ್ರಭುತ್ವ ಹಾಗೂ ಪ್ರತಿರೋಧದ ನೆಲೆಗಳನ್ನು ಇವರ ಹಸೀನಾ ಮತ್ತು ಇತರ ಕಥೆಗಳು ಪರಿಚಯಿಸುತ್ತವೆ. ಈ ಪೂರ್ವಾಗ್ರಹಗಳು ಕೇವಲ ಮುಸ್ಲಿಂ ಸಮುದಾಯದಲ್ಲಿ ಅಷ್ಟೇ ಅಲ್ಲ ಭಾರತದ ಎಲ್ಲಾ ಸಮುದಾಯಗಳಲ್ಲಿಯೂ ಇದೆ. ನಿಜವಾದ ಲೇಖಕ ಬರಹಗಾರನಿಗೆ ಒಳ ವಿಮರ್ಶೆ (Internal Criticism) ಬೇಕು ನಾನು ನನ್ನ ಕುಟುಂಬ, ನನ್ನ ಧರ್ಮ, ನನ್ನ ಸಮಾಜ ಹೀಗೆ ಎಲ್ಲದರ ಬಗ್ಗೆ ಒಳ ವಿಮರ್ಶೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಜಡತೆ ಹೋಗಿ ಚಲನಶೀಲತೆ ಬರಲು ಸಾಧ್ಯ, ಅಸತ್ಯ ಸತ್ತು ಸತ್ಯ ಬದುಕಲು ಸಾಧ್ಯವಾಗುತ್ತದೆ. ಪ್ರತಿ ಜಾತಿ, ಧರ್ಮ, ಸಮಾಜದಲ್ಲಿ ಒಳ ವಿಮರ್ಶೆ ಆಗಬೇಕು, ಬಾನು ಮುಷ್ತಾಕರೇ ಹೇಳುವಂತೆ ಲೇಖಕನಿಗೆ ಜಾತಿ ಇರುತ್ತದೆ. ಆದರೆ ಬರಹಕ್ಕೆ ಜಾತಿ ಇರಲ್ಲ, ಅವರು ಈ ತರಹದ ಕಥೆಗಳನ್ನು ಬರೆಯುವುದಕ್ಕೆ ಅವರ ಸಮುದಾಯವೇ ವಿರೋಧ ಮಾಡಿತ್ತು. ಅವರನ್ನು ಬಹಿಷ್ಕಾರ ಹಾಕಿದರು ಫತ್ವಾ ಹೊರಡಿಸಿದರು. ಇದಾವುದಕ್ಕೂ ಮಣಿಯದೆ, ಕುಗ್ಗದೆ ತಮ್ಮ ಬರವಣಿಗೆ ಕೈ ಕರ್ಯವನ್ನು ಮುಂದುವರೆಸಿದರು. ಅವರ ಪ್ರತಿಯೊಂದು ಕಥೆಗಳು ಮುಸ್ಲಿಂ ಸಮುದಾಯ ಹೆಣ್ಣಿನ ಮೇಲೆ ಹಾಕಿರುವ ಕಟ್ಟುಪಾಡುಗಳನ್ನು ವಿವರಿಸುತ್ತಾ, ಲಿಂಗ ಸಮಾನತೆಗಾಗಿ ಹಕ್ಕೋತ್ತಾಯ ಮಾಡುವಂತಿವೆ. ಬರಹಕ್ಕೆ ಸಮಾಜ ಸ್ವಾಸ್ಥ ಮಾಡುವ, ಗ್ರಹಿಕೆಗಳನ್ನು ತಿಳಿಗೊಳಿಸುವ ಶಕ್ತಿ ಇದೆ. ಆ ಎಲ್ಲಾ ಶಕ್ತಿಯ ಮೂಲಕ ಬಾನು ಮುಷ್ತಾಕರು ಕನ್ನಡದ ಪ್ರಸಿದ್ಧ ಬಂಡಾಯ ಲೇಖಕಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಆಕರ ಗ್ರಂಥ: ಹಸೀನಾ ಮತ್ತು ಇತರ ಕಥೆಗಳು - ಬಾನು ಮುಷ್ತಾಕ ಎದೆಯ ಹಣತೆ - ಬಾನು ಮುಷ್ತಾಕ ಬಂಡಾಯ ಸಾಹಿತ್ಯ - ಪ್ರೋ ಬಸವರಾಜ ಸಬರದ ಹೊಸಗನ್ನಡ ಸಾಹಿತ್ಯ ಚರಿತ್ರೆ - ಪ್ರೊ. ಎಸ್.ಎಲ್. ಶೇಷಗಿರಿರಾವ
ಡಾ. ಮಹಾದೇವಿ ಹೆಬ್ಬಾಳೆ (2026) studied this question.